ಗುರುಕುಲದಲ್ಲಿ ಕೊನೆಯ ದಿನ ಶಿಷ್ಯನು ತನ್ನ ಗುರುವಿಗೆ ನಮಸ್ಕರಿಸಿ ಹೊರಡಲು ತಯಾರಾದಾಗ ಗುರು ಶಿಷ್ಯನಿಗೆ ಕರೆದು ಒಂದು ಕನ್ನಡಿಯನ್ನು ಉಡುಗೊರೆಯಾಗಿ ಕೊಟ್ಟು ಇದರಲ್ಲಿ ಬೇರೆಯವರ ಮನಸ್ಸಿನಲ್ಲಿರುವ ಒಳ್ಳೇದು ಕೆಟ್ಟದ್ದು ತಿಳಿಯುತ್ತದೆ ಎಂದು ಹೇಳುತ್ತಾರೆ.
ಇದನ್ನು ಕೇಳಿದ ಶಿಷ್ಯನಿಗೆ ತುಂಬ ಸಂತೋಷವಾಗಿ ಗುರುವಿಗೆ ವಿಧಾಯ ತಿಳಿಸಿ ಅಲ್ಲಿಂದ ಹೊರಡುತ್ತಾನೆ. ಹೀಗೆ ಹೋಗುವಾಗ ಅವನಿಗೆ ಒಬ್ಬ ಗೆಳೆಯ ಸಿಗುತ್ತಾನೆ. ಅವನ ಮೇಲೆ ಆ ಕನ್ನಡಿಯನ್ನು ಪ್ರಯೋಗಿಸೋಣ ಎಂದು ಯೋಚನೆ ಮಾಡಿ ಅವನಿಗೆ ಆ ಕನ್ನಡಿಯನ್ನು ಅವನ ಮುಂದೆ ಇಟ್ಟು ಅವನ ಮನಸ್ಸಿನಲ್ಲಿರುವ ಕೆಟ್ಟ ಭಾವನೆಗಳು, ಮತ್ಸರ ಎಂದು ಅವನಿಗೆ ತಿಳಿದು ಇದರಿಂದ ಬೇಸರಗೊಂಡು ಅವನು ಮುಂದೆ ನಡೆಯುತ್ತಾನೆ.
ಆಗ ಅವನಿಗೆ ಒಬ್ಬರು ಪರಿಚಯಸ್ತರು ಸಿಗುತ್ತಾರೆ. ಅವರನ್ನು ಪರೀಕ್ಷಿಸಿದಾಗ ಅವರ ಮನಸಿನಲ್ಲಿಯೂ ಕೆಟ್ಟ ಆಲೋಚನೆಗಳು ಇರುವುದು ತಿಳಿಯುತ್ತದೆ. ಇದರಿಂದ ಇನ್ನೂ ಬೇಸರ ಮಾಡಿಕೊಂಡು ಮನೆಯ ಕಡೆಗೆ ಹೋಗುತ್ತಾನೆ. ಅಲ್ಲಿ ಅವನ ಅಪ್ಪ ಅಮ್ಮನನ್ನ ನೋಡಿ ಇವರ ಮನಸಿನಲ್ಲಿ ಯಾವುದೇ ಕಲ್ಮಶ ಇರಲು ಸಾಧ್ಯವಿಲ್ಲ ಯಾಕೆಂದರೆ ಇವರಿಗೆ ಊರಲ್ಲಿ ತುಂಬಾ ಮರ್ಯಾದೆ ಇದೆ ಎಂದು ಯೋಚಿಸಿ ಆದರೂ ಒಮ್ಮೆ ನೋಡೋಣ ಎಂದು ಕನ್ನಡಿಯನ್ನು ಅವರ ಮುಂದೆ ಇಡುತ್ತಾನೆ. ಅವರ ಮನಸ್ಸಿನಲ್ಲಿಯೂ ಇರುವ ಕೆಟ್ಟ ಭಾವನೆಗಳನ್ನು ತಿಳಿದ ಅವನ ಮನಸ್ಸಿಗೆ ತುಂಬಾ ನೋವಾಗುತ್ತದೆ.
ಈ ಪ್ರಪಂಚದಲ್ಲಿ ಯಾರೂ ಒಳ್ಳೆಯವರಿಲ್ವಾ ಎಂದು ಯೋಚಿಸಿ ಈ ಕನ್ನಡಿಯನ್ನ ಗುರುವಿಗೆ ವಾಪಾಸ್ ಕೊಡೋಣ ಎಂದು ಗುರುವಿನ ಬಳಿಗೆ ಹೋಗಿ ಅವರ ಕೈಗೆ ಕನ್ನಡಿಯನ್ನ ಕೊಟ್ಟು ಈ ಪ್ರಪಂಚ ದಲ್ಲಿ ಎಲ್ಲರ ತುಂಬಾ ಮನಸ್ಸಿನಲ್ಲಿ ಕೆಟ್ಟ ಭಾವನೆಗಳು, ಮತ್ಸರ, ಕ್ರೋಧ ತುಂಬಿಕೊಂಡಿದೆ. ನಿಮ್ಮ ಮನಸ್ಸಿನಲ್ಲಿಯೂ ಒಳ್ಳೆ ಭಾವನೆಗಳು ಇಲ್ಲ ಸ್ವಾಮಿ ಎಂದು ಹೇಳಲು ಗುರುವು ಜೋರಾಗಿ ನಕ್ಕು ಕನ್ನಡಿಯನ್ನು ಶಿಷ್ಯನ ಮುಂದೆ ಇಟ್ಟು ನೋಡುವಾಗ ಅವನ ಮನಸ್ಸಿನಲ್ಲಿಯೂ ತುಂಬಾ ಕೆಟ್ಟ ಭಾವೆನೆಗಳು ,ಮತ್ಸರ, ಕ್ರೋಧ , ಲೋಭ ಇರುವುದು ಕಂಡು ಬರುತ್ತದೆ.
ಆಗ ಗುರುವು ಶಿಷ್ಯನಿಗೆ ನಾನು ನಿನಗೆ ಈ ಕನ್ನಡಿ ಕೊಟ್ಟ ಕೂಡಲೇ ಬೇರೆಯವರ ಬಗ್ಗೆ ತಿಳಿಯಲು ಪ್ರಯತ್ನಿಸಿದೆ ಹೊರತು ನಿನ್ನ ಬಗ್ಗೆ ತಿಳಿಯಲು ನೀನು ಪ್ರಯತ್ನ ಮಾಡಲಿಲ್ಲ ಎಂದು ಹೇಳುತ್ತಾರೆ.
ನಾವು ಯಾವಾಗಲು ಬೇರೆಯವರ ತಪ್ಪನ್ನು ಹುಡುಕುವುದರಲ್ಲಿ ಮಗ್ನರಾಗಿರುತ್ತೇವೆ. ನಮ್ಮಲ್ಲಿರುವ ತಪ್ಪನ್ನು ನೋಡುವುದಿಲ್ಲ ಮೊದಲು ನಾವು ಸರಿಯಾಗಿದ್ದರೆ ನಮಗೆ ಎಲ್ಲವು ಸರಿಯಾಗಿ ಕಾಣುತ್ತದೆ ಎಂಬ ಮಾತು ಶಿಷ್ಯನಿಗೆ ಮನವರಿಕೆಯಾಗುತ್ತದೆ.
Leave feedback about this