ನಿನ್ನ ಮನಸೇ ನಿನಗೆ ಶತ್ರು
ಒಬ್ಬ ಭಕ್ತನು ದೇವರನ್ನು ಕುರಿತು ಬಹಳ ಕಾಲ ತಪಸ್ಸು ಮಾಡುತ್ತಿದ್ದ. ಕಡೆಗೊಂದು ದಿನ ಭಗವಂತನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಭಗವಂತನ ಕೈಯಲ್ಲಿ ಗದೆ ಕೂಡ ಇತ್ತು. ನಿನಗೇನು ಬೇಕು ಎಂದು ಭಗವಂತನು ಕೇಳಿದ ಕೂಡಲೇ ಆ ಭಕ್ತನು “ಭಗವಂತ ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ಶಕ್ತಿಗಳನ್ನೆಲ್ಲ ನಿನ್ನ ಗದೆಯ ಮೂಲಕ ನೀನು ಚಚ್ಚಿ ಹಾಕಬೇಕು ಇದೇ ನನ್ನ ಅಭಿಲಾಷೆ” ಎಂದು ಬೇಡಿಕೊಂಡ.
ಭಗವಂತನು ಕಿರುನಗೆ ನಕ್ಕು ಹಾಗೆ ಆಗಲಿ ಎಂದು ಹೇಳಿ ಕೂಡಲೇ ಮಾಯವಾದ. ಸ್ವಲ್ಪ ಸಮಯದ ನಂತರ ಭಗವಂತನ ಗದೆ ವೇಗವಾಗಿ ತೂರಿ ಬಂದು ವರವನ್ನು ಕೋರಿಕೊಂಡ ಭಕ್ತನ ಮೇಲೆ ದಾಳಿ ಮಾಡಿ ಅವನನ್ನು ಸಿಕ್ಕಸಿಕ್ಕಲ್ಲಿ ಚಚ್ಚ ತೊಡಗಿತು. ಭಕ್ತ ನೋವಿನ ಬಾದೆಯಿಂದ ಹಾಗೆ ನೆಲಕ್ಕೆ ಉರುಳಿ ಬಿದ್ದ. ಇದೇನಿದು ನಾನು ವರವನ್ನು ಬೇಡಿಕೊಂಡಿದ್ದೆ ತಪ್ಪಾಗಿ ಹೋಯಿತಲ್ಲ ಎಂದು ಗಟ್ಟಿಯಾಗಿ ಅಳತೊಡಗಿದ.
ನಾನು ನನ್ನ ಅಭಿವೃದ್ಧಿಗೆ ಅಡ್ಡಿಯಾಗಿರುವ ನನ್ನ ಶತ್ರುಗಳನ್ನು ಚಚ್ಚಿ ಹಾಕು ಎಂದು ಬೇಡಿಕೊಂಡರೆ ನೀನು ಮರೆಗುಳಿತನದಿಂದ ನಿನ್ನ ಗದೆಯನ್ನು ನನ್ನ ಮೇಲೆಯೇ ಪ್ರಯೋಗಿಸುತ್ತಿಯಾ ಎಂದು ಭಗವಂತನನ್ನು ಶಪಿಸತೊಡಗಿದ. ಭಗವಂತನು ಪುನ ಪ್ರತ್ಯಕ್ಷನಾಗಿ ಭಕ್ತನನ್ನು ನೋಡಿ ಹೀಗೆ ಹೇಳಿದ “ಭಕ್ತ ನೀನು ಕೇಳಿಕೊಂಡಂತೆ ನಾನು ನನ್ನಗದೆಯನ್ನು ಉಪಯೋಗಿಸಿದೆ. ನಾನು ಮರೆಗುಳಿತನದಿಂದಾಗಲಿ ಅಥವಾ ಗುರಿ ತಪ್ಪಿ ಹಾಗೆ ಮಾಡಲಿಲ್ಲ ಬೇರೆಯವರನ್ನು ಚಿತ್ತು ಮಾಡಬೇಕು, ಅವರನ್ನು ನೆಲ ಕುರುಳಿಸಬೇಕು, ಅವರನ್ನು ನಾಶ ಮಾಡಬೇಕು ಎಂದು ಆಲೋಚಿಸುವ ನಿನ್ನ ಮನಸ್ಸೇ ನಿನಗೆ ನಿನ್ನ ಅಭಿವೃದ್ಧಿಗೆ ಶತ್ರು. ನಿನ್ನ ಅಭಿವೃದ್ಧಿಗೆ ಅಡ್ಡಿಯಾಗಿರುವುದು ನೀನೇ. ಆದುದರಿಂದ ನನ್ನ ಗದೆ ನಿನ್ನ ಮೇಲೆಯೇ ದಾಳಿ ನಡೆಸಿತು ಎಂದರು.
Leave feedback about this