ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ನಡೆದಿರುವ ಮಹಾಲಕ್ಷ್ಮಿ ಎಂಬುವವರ ಕೊಲೆ ಪ್ರಕರಣ ನಿಮಗೆಲ್ಲ ತಿಳಿದಿದೆ. ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇಟ್ಟ ಸುದ್ದಿಯ ಬಗ್ಗೆ ದೇಶದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಈ ಕೊಲೆಯ ಹಿಂದೆ ಯಾರಿದ್ದಾರೆ ಮತ್ತು ಎಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತ್ತಿದ್ದು ಆರೋಪಿಯನ್ನ ಬಂಧಿಸಿ ಕರೆತರಲು ಹೊರರಾಜ್ಯಗಳಿಗೆ ತೆರಳಿದ್ದಾರೆ.
ಮೊದಲಿಗೆ ಮಹಾಲಕ್ಷ್ಮಿ ಜೊತೆಗೆ ಸಲುಗೆಯಿಂದ ಇದ್ದ ಅಶ್ರಫ್ ಎಂಬಾತನ ಮೇಲೆ ಎಲ್ಲರೂ ಅನುಮಾನ ಪಟ್ಟು ವಿಚಾರಣೆಯನ್ನು ನಡೆಸಿದಾಗ ಇವರಿಬ್ಬರ ನಡುವೆ ಇರುವ ಸಂಬಂಧ ನಿಜ ಎಂದು ಒಪ್ಪಿಕೊಂಡಿದ್ದ. ಆದರೆ ಈ ಕೊಲೆಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ನಮ್ಮ ವಿಷಯ ತಿಳಿದು ಗಲಾಟೆಯಾದ ನಂತರ ನಾವು ಆರು ತಿಂಗಳಿನಿಂದ ದೂರ ಇದ್ದೇವೆ ಎಂಬ ವಿಷಯ ಪೊಲೀಸರಿಗೆ ತಿಳಿಸಿದ್ದಾನೆ ಹಾಗಾಗಿ ಪೊಲೀಸರು ಅಶ್ರಫ್ನನ್ನು ಬಿಟ್ಟು ಕಳಿಸಿದ್ದಾರೆ.
ಹಾಗಾದರೆ ಈ ಕೊಲೆ ಯಾರು ಮಾಡಿರಬಹುದು ಎಂಬ ಪ್ರಶ್ನೆ ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು. ಈಗ ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಮಹಾಲಕ್ಷ್ಮಿಯ ಮೊಬೈಲ್ ಪರಿಶೀಲಿಸಿದಾಗ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಒಡಿಶಾ ಮೂಲದ ವ್ಯಕ್ತಿ ಮೇಲೆ ಕೊಲೆ ಅನುಮಾನ ಖಾತ್ರಿಯಾಗಿದೆ.ಮೃತ ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದ ಮಾಲ್ ನಲ್ಲಿ ಮ್ಯಾನೇಜರ್ ಆಗಿದ್ದವನೇ ಆರೋಪಿ ಎಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಗಂಡನ ಜೊತೆ ಜಗಳ ಮಾಡಿಕೊಂಡು ಮನೆಯನ್ನು ಬಿಟ್ಟು ವೈಯಾಲಿಕಾವಲ್ನಲ್ಲಿ ಮಹಾಲಕ್ಷ್ಮಿ ಬಾಡಿಗೆಗೆ ಮನೆ ಮಾಡಿಕೊಂಡು ಇದ್ದರು. ಈಗ ಕೆಲಸ ಮಾಡುವ ಮಾಲ್ನಲ್ಲಿ ಆರೋಪಿಯ ಪರಿಚಯ ಮಹಾಲಕ್ಷ್ಮಿಗೆ ಆಗಿತ್ತು. ಇಬ್ಬರ ನಡುವೆ ಸ್ನೇಹ ಶುರುವಾಗಿ ಅಕ್ರಮ ಸಂಬಂಧದವರೆಗೂ ಮುಂದುವರಿದಿತ್ತು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇದರ ನಡುವೆ ಮಹಾಲಕ್ಷ್ಮಿ ಅಶ್ರಫ್ ಜೊತೆಗೂ ಸಲುಗೆಯಿಂದ ಇದ್ದ ವಿಚಾರ ಆರೋಪಿಗೆ ಗೊತ್ತಾಗಿ ಅಶ್ರಫ್ನಿಂದ ದೂರ ಇರುವಂತೆ ಎಚ್ಚರಿಕೆ ಕೊಟ್ಟಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಆರೋಪಿ ಮತ್ತು ಮಹಾಲಕ್ಷ್ಮಿ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಆರೋಪಿ ಈ ರೀತಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ ಬಳಿಕ ಆತ ಬೆಂಗಳೂರಿನಿಂದ ತಪ್ಪಿಸಿ ಕೊಂಡಿದ್ದು , ಕೊಲೆ ಬಳಿಕ ತನ್ನ ಸಹೋದರಿಗೆ ಫೋನ್ ಮಾಡಿ ಪೊಲೀಸರು ನನ್ನನ್ನು ಬಂಧಿಸಲು ಬರಬಹುದು ಹಾಗಾಗಿ ನಾನು ಈ ಊರು ಬಿಟ್ಟು ಹೋಗುತ್ತಿದ್ದೇನೆ ಎಂದು ಹೇಳಿ ಆರೋಪಿ ನಾಪತ್ತೆಯಾಗಿದ್ದಾನೆ. ಆರೋಪಿ ಸಹೋದರನನ್ನು ಸಹ ಪೊಲೀಸರು ವಿಚಾರಣೆ ನಡೆಸಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಮೃತ ಮಹಾಲಕ್ಷ್ಮಿ ಕಾಲ್ ರೆಕಾರ್ಡ್ ಪ್ರಕಾರ ಮೂವರ ಜೊತೆ ಹೆಚ್ಚು ಸಂಭಾಷಣೆ ನಡೆದಿರುವುದು ತಿಳಿದು ಬಂದಿದೆ. ಇದರಲ್ಲಿ ಇಬ್ಬರು ಪೊಲೀಸರಿಗೆ ಸಿಕ್ಕಿದ್ದು ಆರೋಪಿ ಇನ್ನು ಪತ್ತೆಯಾಗಿಲ್ಲ. ಈತನ ಮೊಬೈಲ್ ವಿವರಗಳನ್ನು ಬೆನ್ನಟ್ಟಿದಾಗ ಕೊನೆಯ ಬಾರಿ ಪಶ್ಚಿಮ ಬಂಗಾಳ ದಲ್ಲಿ ಲೊಕೇಶನ್ ಪತ್ತೆಯಾಗಿದೆ, ಸದ್ಯ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಎರಡು ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಮಹಾಲಕ್ಷ್ಮಿಯ ಮೃತದೇಹ ಪೀಸ್ ಪೀಸ್ ಆಗಿದ್ದರಿಂದ ಅದರ ಮರಣೋತ್ತರ ಪರೀಕ್ಷೆಯು ವೈದ್ಯರಿಗೆ ದೊಡ್ಡತಲೆನೋವಾಗಿತ್ತು. ಮೊದಲಿಗೆ ಪೀಸ್ ಆಗಿರುವ ತುಂಡುಗಳನ್ನು ಜೋಡಿಸಿ, ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಇಂದು ಮಹಾಲಕ್ಷ್ಮಿಯ ಮರಣೋತ್ತರ ಪರೀಕ್ಷೆಯ ವರದಿ ಹೊರಬರುವ ಸಾಧ್ಯತೆ ಇದೆ.