ನಡೆಯುವವನು ಎಡವದೇ ಕುಳಿತವನು ಎಡವುತ್ತಾನೆಯೇ ?
ಮಹಾಭಾರತದಲ್ಲಿ ಶ್ರೀಕೃಷ್ಣ ನ ಮೊದಲು ಪರಿಚಯ ಪಾಂಡು ಪುತ್ರರಿಗೆ ದ್ರವಪದಿಯ ಸ್ವಯಂ ವರ ಕಾಲದಲ್ಲಿ ಅದಾದ ಮೇಲೆ ಇಡೀ ಮಹಾಭಾರತದ ಕೇಂದ್ರ ಬಿಂದು ಶ್ರೀ ಕೃಷ್ಣನೇ ಆಗಿ ಬಿಡುತ್ತಾನೆ. ಅದಕ್ಕಾಗಿಯೇ ಕುಮಾರವ್ಯಾಸ ಪೇಳುವೆನು ಕೃಷ್ಣ ಚರಿತೆಯನ್ನು” ಎಂದದ್ದು. ದ್ರವಪದಿಯನ್ನು ವರಿಸಲು ರಾಜರು ಮಹಾ ರಾಜರು ವಿಫಲರಾದಾಗ ದ್ರವಪದಿಯ ಅಣ್ಣ ದೃಷ್ಟದ್ಯುಮ್ನ್ ವಿಪ್ರರಿಗೆ ಒಂದು ಅವಕಾಶ ನೀಡಲು ನಿರ್ಧರಿಸಿದಾಗ ನಡೆಯುವ ಘಟನೆ ಇದು. ಧರ್ಮರಾಜನ ಅಣತಿಯ ಮೇರೆಗೆ ಅರ್ಜುನ ಮತ್ಸ್ಯಯಂತ್ರ ಭೇದನೆ ಮಾಡಲು ಮೇಲೆದ್ದನು. ಇದನ್ನು ನೋಡಿದ ಅಕ್ಕ ಪಕ್ಕದಲ್ಲಿದ್ದ ವಿಪ್ರರು ಅರ್ಜುನನಿಗೆ ‘ಏನು ಎದ್ದಿರಿ ?’ಧನುವಿಂಗೇನು ಅಲ್ಲವಷ್ಟೆ ?, ರಾಜವಧುವಿಗಾಗಿ ನಿಮಗೂ ಆಶೆಯೇ ? ಎಂದು ಅಪಹಾಸ್ಯದ ಮಾತುಗಳನ್ನು ಕೇಳಿಯೂ ಪಾರ್ಥ ತನ್ನ ಉತ್ತರೀಯವನ್ನು ಸರಿಪಡಿಸಿಕೊಂಡು ಮೇಲೆದ್ದು ನಡೆದೇ ಬಿಟ್ಟನು.
ಆಮೇಲಿನ ಮಹಾಭಾರತ ಕಥೆ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಅಸಾಧ್ಯವಾದುದನ್ನು ಸಾದಿಸಲು ಹೊರಟ ವ್ಯಕ್ತಿಯೋರ್ವನಿಗೆ ಸುತ್ತಮುತ್ತಲಿನ ಜನ ಅಪಹಾಸ್ಯ ಮಾಡುತ್ತಲೇ ಇರುತ್ತಾರೆ. ಆದರೆ ಇದರಿಂದ ವಿಚಲಿತನಾಗದೇ ಅದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಛಲ ಯಾರಿಗೆ ಇರುತ್ತದೆಯೋ ಅಂಥವರು ಮಾತ್ರ ಜೀವನದಲ್ಲಿ ಅದ್ವೀತೀಯರಾಗುತ್ತಾರೆ. ದುರಂತ ಎಂದರೆ ನಮ್ಮೊಳಗೇ ನಾವು ಮಾಡುವ ಕೆಲಸ ಕುರಿತು ಸಂದೇಹ ಇರುತ್ತದೆ. ಅದಕ್ಕೆ ಯಾರಾದರೂ ದನಿಗೂಡಿದರೆ ಮುಗಿದೇ ಹೋಯಿತು. ನಾವು ಹಸಿದ ಹಾಸಿಗೆಯ ಮೇಲೆ ಮಲಗಿ ಹೊದಿಕೆ ಹೊದ್ದು ಮಲಗಿ ಬಿಡುತ್ತೇವೆ. ಆದರೆ ದೃಢ ನಿರ್ದಾರ ಮಾಡಿದ ವ್ಯಕ್ತಿ ಇಂತಹ ಅಡತಡೆಗಳನ್ನು ಮೊದಲೇ ಗಮನಿಸಿ ಅದನ್ನು ಎದುರಿಸಲು ಸಿದ್ದನಾಗಿ ನಿಂತಿರುತ್ತಾನೆ. ಅವನು ಯಾವ ಅಪಹಾಸ್ಯಗಳಿಗೂ ಆಡುವ ಮಾತುಗಳಿಗೂ ಹಾಗೂ ಹತಾಶೆಯಿಂದ ಮನಸ್ಸನ್ನು ಮುದುಡಿಸಿ ಕೊಳ್ಳುವುದಿಲ್ಲ.
ತಾನು ನಡೆಯಬೇಕೆಂಬ ಹಾದಿಯಲ್ಲಿ ಆತ ನಡೆದೇ ಹೋಗುತ್ತಾನೆ. ಯಶಸ್ಸನ್ನು ತನ್ನದಾಗಿಸಿಕೊಳ್ಳುತ್ತಾನೆ. ಇಂತಹ ದಿಟ್ಟ ನಿರ್ದಾರದಿಂದಲೇ ವ್ಯಕ್ತಿ ತಾನು ಸುಧಾರಿಸುತ್ತಾನೆ. ಅದರೊಂದಿಗೆ ಸಮಾಜವನ್ನು ಸುಧಾರಿಸುತ್ತಾನೆ. ಕೆಲವೊಂದು ಸಾರಿ ನಮ್ಮ ಪರಿಸ್ಥಿತಿಯೂ ಮೀರಿ ಕೆಲಸಕ್ಕೆ ವಿಗ್ನ ಬರುವುದುಂಟು. ನಡೆಯುವವನು ಎಡವದೇ ಕುಳಿತವನು ಎಡವುವನೇ? ಎಂಬಂತೆ ಸಾಧಿಸಬೇಕೆಂಬ ಕೆಲಸವನ್ನು ಮತ್ತೆ ಪ್ರಾರಂಭಿಸಬೇಕು. ಎಡವಿ ಬಿದ್ದ ವ್ಯಕ್ತಿ ಹಾಗೆಯೇ ಕೆಳಗೆ ಮಲಗದೇ ಮತ್ತೆ ಮೇಲೆದ್ದು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು. ಇಂತಹ ಯುವ ಪೀಳಿಗೆಯ ಹೆಚ್ಚಿನ ಅವಶ್ಯಕತೆ ಈ ಕ್ಷಣದ ಅಗತ್ಯತೆ. ಅದು ಈ ಕ್ಷಣದಿಂದಲೇ ಆರಂಭಗೊಳ್ಳಲಿ.
Leave feedback about this